ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅನಂತಶಯನಗುಡಿ ಗ್ರಾಮದಲ್ಲಿರುವ ಅನಂತಶಯನ ದೇವಸ್ಥಾನವು ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರಿಂದ (ಕ್ರಿ.ಶ. 1524) ತನ್ನ ಮೃತ ಮಗ ತಿರುಮಲರಾಯನ ಸ್ಮರಣಾರ್ಥವಾಗಿ ನಿರ್ಮಿಸಲ್ಪಟ್ಟಿತು. == ವಾಸ್ತುಶಿಲ್ಪ == 1175 ಚದರ ಮೀಟರುಗಳಷ್ಟು ವಿಸ್ತಾರವಾದ ದೇಗುಲದ ಕಟ್ಟಡಕ್ಕೆ 147*85 ಮೀಟರುಗಳಷ್ಟು ದೊಡ್ಡ ಸುತ್ತುಗೋಡೆ ಇದೆ. ಹೊರಗೋಡೆ ಕುಸಿದಿದ್ದು ಬೃಹದಾಕಾರದ ಪ್ರವೇಶದ್ವಾರ ಮಾತ್ರ ಉಳಿದುಕೊಂಡಿದೆ. ಗೋಡೆಗಳ ಮೇಲೆ ವಿವಿಧ ಉಬ್ಬುಶಿಲ್ಪಗಳು, ಚಿಕ್ಕ ಆಕಾರವಿನ್ಯಾಸ, ಬಾಗಿಲ ಚೌಕಟ್ಟಿನ ಮೇಲೆ ಹಬ್ಬಿದ ಬಳ್ಳಿಗಳನ್ನು ಆಧರಿಸಿ ಬಿನ್ನಾಣದಿಂದ ನಿಂತು ಸ್ವಾಗತಿಸುತ್ತಿರುವ ಶಿಲಾಸುಂದರಿಯರು ಇದ್ದು ಈ ದೇವಾಲಯವು ವಿಜಯನಗರ ಶಿಲ್ಪ ಮತ್ತು ವಾಸ್ತುಶೈಲಿಗೆ ಮಾದರಿ ಆಗಿದೆ. ಬೃಹತ್ತಾದ ಆವರಣ, 46 ಕಂಬಗಳನ್ನೊಳಗೊಂಡ ದೊಡ್ಡ ಮಂಟಪ. ಮೂರು ಬಾಗಿಲುಗಳ ಗರ್ಭಗುಡಿ. ಆಯತಾಕಾರದ ಗರ್ಭಗುಡಿಯ ಮೇಲಕ್ಕೆ ಹತ್ತು ಮೀಟರ್ ಎತ್ತರದ ಕಮಾನಿನಾಕಾರದ ಛಾವಣಿ ಇಲ್ಲಿವೆ. ಗರ್ಭಗುಡಿಗೆ ಮೂರು ಬಾಗಿಲು ಇವೆ. ಪೀಠದಲ್ಲಿ ದೇವರ ಮೂರ್ತಿ ಇಲ್ಲ. == ಇತಿಹಾಸ == ಅನಂತಪದ್ಮನಾಭ ದೇವರಿಗಾಗಿ ಕ್ರಿಸ್ತಶಕ 1524ರಲ್ಲಿ ಶ್ರೀಕೃಷ್ಣದೇವರಾಯ ಈ ದೇವಾಲಯವನ್ನು ನಿರ್ಮಿಸಿದ್ದಾಗಿ ಶಾಸನಗಳಿಂದ ತಿಳಿದು ಬರುತ್ತದೆ. ಗತಿಸಿದ ತನ್ನ ಮಗ ತಿರುಮಲರಾಯನಿಗಾಗಿ ಶಾಲ,ತಿರುಮಲ ಮಹರಾಯಪುರ ಎಂಬ ಅಭಿಮಾನದಿಂದ ಕರೆಯಲ್ಪಡುವ ಪ್ರಸ್ತುತ ಅನಂತಶಯನಗುಡಿ ಗ್ರಾಮವನ್ನು ನಿರ್ಮಿಸಿ ವೈಖಾನಸ ಅಗಮ ಶಾಸ್ತ್ರವನ್ನು ಬಲ್ಲ ಅರ್ಚಕರ ಸಮೂಹವನ್ನು ನೈಮಿತ್ತಿಕ ವೈಖಾಸದ ಪೂಜೆಗಳಿಗಾಗಿ ರಾಜನು ಈ ಗ್ರಾಮವನ್ನು ನಿರ್ಮಿಸಿರುವುದಾಗಿ ಶಾಸನ ಸಾರುತ್ತದೆ. ಈ ಅನಂತಪದ್ಮನಾಭ ದೇವಸ್ಥಾನವು ಶಿಥಿಲವಾಗಿ ಕುಸಿದಿತ್ತು. ಬಿದ್ದ ಪುರಾತನ ಕಲ್ಲಿನ ಅವಶೇಷಗಳನ್ನು ಮರು ಜೋಡಣೆ ಮಾಡುವ ಮೂಲಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಅದರ ಜೀರ್ಣೋದ್ಧಾರ ಮಾಡಿದೆ. == ಚಿತ್ರಸಂಪುಟ == == ಉಲ್ಲೇಖಗಳು == == ಇವನ್ನೂ ನೋಡಿ == ೧. ಈ ದೇವಸ್ಥಾನದ ಕುರಿತು ರಾಜೇಶ್ ನಾಯ್ಕ್ ಅವರ ಬ್ಲಾಗ್ ಲೇಖನ